Friday, July 29, 2011

ನಮ್ಮ ನೆಲ ನಮಗೆ ಬಿಡಿ _/|\_.

ದೇಶದ ನೂರಾರು ಹಳ್ಳಿಗಳಲ್ಲಿ, ಅಲ್ಲಿನ ಮನೆಮನೆಗಳಲ್ಲಿ ದುಡಿಯುವ ಭೂಮಿಯನ್ನು ಕೊಡುವ-ಕಸಿದುಕೊಳ್ಳುವ ಮಾತು ನಡೆಯುತ್ತಿದೆ. ತನ್ನ ಹೊಲದಲ್ಲಿ ತಾನೇ ದುಡಿದು ಉಣ್ಣುತ್ತಿದ್ದ ರೈತ, ಈಗ ಇದ್ದಕ್ಕಿದ್ದಂತೆ ಇದ್ದ ಭೂಮಿಯನ್ನು ಮಾರಿ ಮತ್ತೊಮ್ಮೆ ಜೀತದಾಳಾಗಬೇಕಾಗಿ ಬಂದಿದೆ. ಕಾರ್ಖಾನೆಗಳಿಗೆ, ವಿದ್ಯುತ್ ಸ್ಥಾವರಗಳಿಗೆ, ಹೂಡಿಕೆದಾರರಿಗೆ, ಕೃಷಿಯ ಮೇಲೆ ಏಕಸ್ವಾಮ್ಯ ಸಾಧಿಸುವ ಬಂಡವಾಳಶಾಹಿಗಳ ಕೈಗೆ ಭೂಮಿಯನ್ನು ಕೊಟ್ಟು, ಅವರಿಗೆ `ಜೀ ಹುಜೂರ್...` ಎನ್ನಬೇಕಾದ ಸ್ಥಿತಿ ಸನ್ನಿಹಿತವಾಗುತ್ತಿದೆ.

ಈಗ ಮಾತೆಂದರೆ ಭೂಮಿಯದು, ಬಂಗಾರದ್ದು ಮಾತ್ರ. ನಮ್ಮನ್ನಾಳುವ ಹಮ್ಮಿನಲ್ಲಿ ಬೀಗುತ್ತಿರುವ ಪ್ರಭುಗಳ ಖಾತೆಯಲ್ಲಿ ಸಾವಿರ ಸಾವಿರ ಎಕರೆ ಭೂಮಿಯ ಮಾತು; ದೇವರ ಹುಂಡಿಯಲ್ಲಿರುವ, ನೆಲಮಾಳಿಗೆಯಲ್ಲಿ ಪತ್ತೆಯಾದ ಸಹಸ್ರಾರು ಕೋಟಿ ಬಂಗಾರದ ಮಾತು. ಆದರೆ ಭೂಮಿಗೆ ಬಂಗಾರಕ್ಕಿಂತಲೂ ಬೆಲೆ ಹೆಚ್ಚು. `ಸೈಟು ಮಾಡಿ, ಹೊಲ ಮಾರೀಕೊಳ್ಳಿ; ದುಡ್ಡು ಆಗುತ್ತದೆ` ಎನ್ನುವ ಪುಕ್ಕಟೆ ಸಲಹೆಯ ಹಿಂದೆ ರೈತನೊಬ್ಬನ ಭೂಮಿ ಕಸಿದ ಕ್ರೌರ್ಯ ಕಾಣುವುದಿಲ್ಲ. 

 ಪುಟ್ಟ ಆಸ್ತಿ ಮಾಡಿಕೊಳ್ಳುವ ಆಸೆಗೆ ಕ್ರೌರ್ಯದ ಪಟ್ಟ ಕಟ್ಟುವುದು ಬೇಡ; ಆದರೆ ಜೀವದಾಯಿನಿಯಾಗಿ ನಾಡಿಗೆ ಅನ್ನ ನೀಡುವ ಭೂಮಿಯನ್ನು, ಆ ಭೂಮಿತಾಯಿಯ ಮಕ್ಕಳಿಂದ ಅಗಲಿಸಿದರೆ ಆ ಮಕ್ಕಳ ಗತಿ ಏನಾಗಬೇಡ? ಯಾರು ಅನ್ನ ಕೊಟ್ಟಿದ್ದರೋ ಅವರನ್ನು ಬೇಡಲು ತಂದಿಟ್ಟ ಸ್ಥಿತಿಗೆ ಜೀವಕಾರುಣ್ಯ ಎನ್ನಬೇಕೋ, ಕ್ರೌರ್ಯ ಎನ್ನಬೇಕೋ, ಅಭಿವೃದ್ಧಿ ಎನ್ನಬೇಕೋ?

ಹಳ್ಳಿಗಳು ನಾಪತ್ತೆ
ಚೆಂದದ ಬದುಕು ಕಟ್ಟಿಕೊಳ್ಳಲಿಕ್ಕಾಗಿ ಹಳ್ಳಿ ಬಿಟ್ಟು ನಗರ ಸೇರಿದ ಹಳ್ಳಿಹೈದರು ಅಲ್ಲಿಂದ ಕಾಲ್ಕೀಳಲೂ ಆಗದೇ, ಹಳ್ಳಿಗೆ ಮರಳಲೂ ಆಗದೇ ಚಡಪಡಿಸುವುದು ಎಲ್ಲ ಕಾಲಗಳ ಕಥೆ. ಆದರೆ, ಅವರಲ್ಲಿ ಕೆಲವರಾದರೂ ಹಳ್ಳಿಯತ್ತ ಮುಖ ಮಾಡಬೇಕಲು ತವಕಿಸುವಂತಾಗಲು ಆಧುನಿಕ ಸಂದರ್ಭ ಸೃಷ್ಟಿಸಿದ ತಲ್ಲಣವೇ ಕಾರಣ. ಆದರೆ, ಅಷ್ಟರಲ್ಲಿ ಗ್ರಾಮ ವಿಪ್ಲವ! ಮೊದಲು ಹೈದರು, ನಂತರ ಹೊಲಗಳು, ಈಗ ಇಡೀ ಹಳ್ಳಿಗೆ ಹಳ್ಳಿಯೇ ಬಿಕರಿಯಾಗುತ್ತಿದೆ.  ಕೆರೆಕಟ್ಟೆಗಳನ್ನು ನುಂಗಿ ನಗರವಾದ ಊರುಗಳು ಹೊಲ-ಹಳ್ಳಿಗಳಿಗೂ ಬಾಯಿ ತೆರೆಯುತ್ತಿರುವ ವೇಗ ನೋಡಿದರೆ ನಡುಕವಾಗುತ್ತದೆ. ಹರವು ಹಿಗ್ಗಿಸಿಕೊಂಡ ಅವು ಸುತ್ತಲಿನ ಗ್ರಾಮಗಳನ್ನು ನುಂಗಿ ನೊಣೆಯುತ್ತಿವೆ. ಹಳ್ಳಿಗಳ ಭಾಷೆ, ಊಟ-ಆಟ, ಉಡುಗೆ-ತೊಡುಗೆ, ಆಚಾರ-ವಿಚಾರಗಳ ಎಲ್ಲವುಗಳನ್ನೂ ಪ್ರಭಾವಿಸುತ್ತಿವೆ. ಅಭಿವೃದ್ಧಿಯ ಹೆಸರಿಗಾಗಿ `ಹಳ್ಳಿಗಳ ದೇಶ`ದಲ್ಲಿ ಹಳ್ಳಿಗಳನ್ನೇ ಹಾರ ಕೊಡಲಾಗುತ್ತಿದೆ.

ಅಣೆಕಟ್ಟುಗಳಿಗಾಗಿ, ನೌಕಾ ನೆಲೆಗಾಗಿ, ವಿಮಾನ ನಿಲ್ದಾಣಕ್ಕೆಂದು, ಕಾರ್ಖಾನೆಗಳಿಗೆಂದು, ಹೆದ್ದಾರಿ ಹಿಗ್ಗಿಸಲೆಂದು, ಶಾಖೋತ್ಪನ್ನ ಕೇಂದ್ರಕ್ಕೆಂದು, ಐಷಾರಾಮಿ ವಸತಿ ಸಮುಚ್ಛಯಗಳನ್ನು ಕಟ್ಟಲೆಂದು, ವಿದ್ಯುತ್ ಸ್ಥಾವರಗಳಿಗೆಂದು... ಕೃಷಿ ಭೂಮಿ ಕರಗುತ್ತಿದೆ. ಹಳ್ಳಿಗಳೆಂಬ ಹಳೆಯ ಬಂಗಾರವನ್ನು ಕರಗಿಸಿ, ಗಟ್ಟಿ ಮಾಡಿ ಯಾರದೋ ಉಡಿ ತುಂಬಲಾಗುತ್ತಿದೆ.

ಹೂಡಿಕೆದಾರರಿಗೆ ಯಾವ ಕ್ಷಣದಲ್ಲಿ ಯಾವ ಊರಿನ ಹೊಲಗಳು ಬೇಕಾಗುತ್ತವೆಯೋ ಗೊತ್ತಿಲ್ಲ. ಅದಕ್ಕಾಗಿ ಸರ್ಕಾರ ರೈತರ ಭೂಮಿಯನ್ನೆಲ್ಲ ಸ್ವಾಧೀನ ಮಾಡಿಕೊಂಡು ಕಂಪೆನಿಗಳಿಗಾಗಿ ಕಾಪಿಡುತ್ತಿದೆ! ಕೂರಿಗೆ, ರಂಟೆ-ಕುಂಟೆ ಹಿಡಿದ ಕೈಗಳಿಗೆ ಬೀಜ, ಮೊಳಕೆ, ಹಸಿರು ಬಸಿರಿನಲ್ಲಿ, ಎತ್ತು-ದನ-ಕರುಗಳೊಂದಿಗೆ ಜೀವಕರುಣೆಯಲ್ಲಿ ಅನ್ನ ಬೆಳೆದವರಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡುತ್ತಾರಂತೆ! ಇದು ಸನಿಹದ ಭವಿಷ್ಯ!

ಕಂಗಾಲಾಗಿರುವ ರೈತರು ಕಾಗೋಡು ಸತ್ಯಾಗ್ರಹ ತೆರನಾದ ಮತ್ತೊಂದು ಹೋರಾಟಕ್ಕೆ ಮುಂದಾಗಬೇಕಾಗಿದೆ. ಅದು ಗೇಣಿದಾರ ರೈತರನ್ನು ಒಕ್ಕಲೆಬ್ಬಿಸುವ ನೀತಿಯನ್ನು ವಿರೋಧಿಸಿ ನಡೆದ ಹೋರಾಟವಾದರೆ, ಇದು ಇದ್ದ ಭೂಮಿಯನ್ನು ನಯವಾಗಿಯೇ ಕಸಿದುಕೊಳ್ಳುವ ಪ್ರಜಾ ಪ್ರಭುತ್ವದ ವಿರುದ್ಧದ ಚಳವಳಿಯಾಗಬೇಕಿದೆ.

No comments:

Post a Comment